ಮಂಗಳವಾರ, ನವೆಂಬರ್ 16, 2021

ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರಾ ಮಹೋತ್ಸವ

ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರಾ ಮಹೋತ್ಸವ

ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಹಲವಾರು ಧರ್ಮಗಳು ತಮ್ಮದೆಯಾದ ನಂಬಿಕೆ, ಸಂಪ್ರದಾಯ, ಆಚರಣೆ, ಜಾತ್ರೆ, ಉತ್ಸವಗಳನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿವೆ. ಇವುಗಳು ಜನಪದರ ಸಾಂಸ್ಕೃತಿಕ ಪರಂಪರೆಗೆ ಪ್ರಮುಖ ಆಧಾರಸ್ತಂಭಗಳಾಗಿರುವುದರಿಂದ ಗ್ರಾಮೀಣ ಬದುಕಿನ ಜೀವಂತ ನಾಡಿಮಿಡಿತಗಳಾಗಿದ್ದು, ಬಹುಮುಖಿ ಸಾಂಸ್ಕೃತಿಕ ಜೀವನಕ್ಕೆ ಕನ್ನಡಿಯಾಗಿವೆ. ಒಂದೊಂದು ಗ್ರಾಮದಲ್ಲಿ ನಡೆಯುವ ಒಂದೊಂದು ಜಾತ್ರೆಗಳು ಸಾಮಾಜಿಕ, ಧಾರ್ಮಿಕ ಹಾಗೂ ಕಲಾತ್ಮಕ ಬದುಕಿನಂಥ ಹಲವಾರು ದೃಷ್ಟಿಯಿಂದ ಹಳ್ಳಿಗರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಇಂತಹ ಒಂದು ಜಾತ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಈಚಲಯಲ್ಲಾಪುರ ಗ್ರಾಮದಲ್ಲಿ ಇದೇ ದಿನಾಂಕ ೨೩.೧೧.೨೦೨೧ರ ಮಂಗಳವಾರ ದಿವಸ ಬಹು ವಿಜೃಂಭಣೆಯಿಂದ ಜರುಗುತ್ತಲಿದೆ. ತನ್ನಿಮಿತ್ಯ ಈ ಲೇಖನ.

ಜಿಲ್ಲಾ ಕೇಂದ್ರದಿಂದ ಈಶಾನ್ಯಕ್ಕೆ ೨೨ ಕಿ.ಮೀ. ದೂರ ಹಾಗೂ ತಾಲೂಕು ಕೇಂದ್ರದಿAದ ಪೂರ್ವಕ್ಕೆ ೧೬ ಕಿ.ಮೀ ದೂರದಲ್ಲಿರುವ ಈಚಲಯಲ್ಲಾಪುರ ಗ್ರಾಮವು ತನ್ನದೇ ಆದ ಪ್ರಕೃತಿ ವೈಶಿಷ್ಟವನ್ನು ಹೊಂದಿದ್ದು ಮಲೆನಾಡಿನಂತೆ ಭಾಸವಾಗುತ್ತದೆ.  ಮನೆಗಳೇ ಕಾಣಿಸದಂತಹ ದಟ್ಟ ಹಸಿರು, ಪಕ್ಕದಲ್ಲೇ ಮೈದುಂಬಿ ನಿಂತ ವಿಶಾಲವಾದ ಕೆರೆ ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ.

ಗಿಡ-ಮರಗಳೊಟ್ಟಿಗೆ ವಾಸಿಸುತ್ತ ಅವುಗಳ ಜೊತೆಗಿನ ಭಾವಪೂರ್ಣ ಸಂಬAಧವನ್ನು ಉಳಿಸಿಕೊಂಡು ಬಂದಿರುವ ನಮ್ಮ ಜನಪದರು ಅವುಗಳಲ್ಲೇ ದೈವತ್ವವನ್ನು ಕಂಡುಕೊAಡವರು. ಇವರು ವೃಕ್ಷದೇವತೆಯನ್ನು ಮರೆವ್ವ, ಕರೆವ್ವ,  ಮರದವ್ವ, ದ್ಯಾಮವ್ವ, ದುರಗವ್ವ, ಎಲ್ಲವ್ವ, ಬನಶಂಕರಿ ಎಂದು ಗ್ರಾಮದೇವತೆಯೊಡನೆ ಅಭೇದ ಕಲ್ಪಿಸಿ ಪೂಜಿಸುತ್ತಾರೆ. ಗ್ರಾಮದೇವತೆಯ ಒಂದು ಸ್ವರೂಪವೇ ಮರದಮ್ಮ ಆಗಿರುವುದರಿಂದ ಊರಿನ ಈಶಾನ್ಯ ದಿಕ್ಕಿಗೆ ಇರುವ ವಿಶಾಲ ಬಯಲಿನಲ್ಲಿರುವ ಪುಟ್ಟ ನೀರಿನ ಹೊಂಡ, ಪಕ್ಕದಲ್ಲಿದ್ದ ಬೇವಿನಮರದ (ಮರದ+ಅಮ್ಮ=ಮರದಮ್ಮ) ಅಡಿಯಲ್ಲಿ ಸುಮಾರು ವರ್ಷಗಳಿಂದ ಪೂಜಿಸಿಕೊಂಡು ಬಂದಿರುವ ದೇವತೆಯೇ ‘ಶ್ರೀ ಮರದಮ್ಮ’. ಈ ದೇವತೆಯು ಬೇಡಿ ಬಂದ ಭಕ್ತರಿಗೆ ವರ ನೀಡುವ ವರದಾಯಿನಿ, ಸಂತಾನ ಫಲ ಕರುಣಿಸುವ ಮಾತೃ ಹೃದಯಿ, ಸಕಲ ಸಂಪತ್ತನ್ನು ದಯಪಾಲಿಸುವ ಕರುಣಾಮಯಿಯಾಗಿ ಭಕ್ತ ಸಂಕುಲವನ್ನು ಸಲಹುತ್ತಿದ್ದಾಳೆ.        
                                                                                                                         
 ಗ್ರಾಮದೇವತೆ ಶ್ರೀ ಮರದಮ್ಮದೇವಿ
    
ಈ ಗ್ರಾಮದಲ್ಲಿ ಹಲವಾರು ಜಾತಿ-ಜನಾಂಗದ ಬಾಂಧವರು ಭಾವೈಕ್ಯತೆಯಿಂದ ಬಾಳುತ್ತಿದ್ದು, ಪರಿಶ್ರಮ, ಶ್ರದ್ಧೆ, ತ್ಯಾಗ, ತಾಳ್ಮೆ, ಅನುಕಂಪ, ಸದಾಚಾರಗಳಿಂದ ಶಾಂತಿ ಪ್ರಿಯರೂ, ಧರ್ಮ ಸಹಿಷ್ಣುಗಳೂ ಆಗಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯುಳ್ಳವರು ಆಗಿರುವುದರಿಂದ ಹಿಂದಿನಿAದಲೂ ಇಲ್ಲಿ ದಾನ, ಧರ್ಮ, ಹಬ್ಬ, ಜಾತ್ರೆ, ಆಚರಣೆಗಳು, ಉತ್ಸವಗಳು ಜರುಗುತ್ತಲೇ ಇರುತ್ತವೆ. ಜಾತ್ರೆ ನಡೆಯುವ ದಿನವನ್ನೂ ಊರಿನ ಜನತೆಯೇ ನಿರ್ಧರಿಸುತ್ತಿದ್ದು, ಕಾರ್ತಿಕ ಮಾಸದಲ್ಲಿ ಬರುವ ‘ಗೌರಿ ಹುಣ್ಣಿಮೆ’ಯ ನಂತರದ ಮಂಗಳವಾರವನ್ನು ಜಾತ್ರೆಯ ದಿನವೆಂದು ನಿಶ್ಚಯಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ೨೩.೧೧.೨೦೨೧ ರ ಮಂಗಳವಾರ ದಿವಸ ಗ್ರಾಮದೇವತೆ ಶ್ರೀ ಮರದಮ್ಮದೇವಿಯ ಜಾತ್ರೆಯು ವಿಜೃಂಭಣೆಯಿAದ ನಡೆಯಲಿದೆ.

ತೊಟ್ಟಿಲು ಜೀಕುಗಳು, ದಿನಸಿ ಅಂಗಡಿಗಳು, ಚಹಾದಂಗಡಿಗಳು, ಮಕ್ಕಳಾಟಿಕೆ ವಸ್ತುಗಳ ಮಾರಾಟಗಾರರು, ಮಣಿಗಾರರು, ಹಣ್ಣು-ಕಾಯಿ, ಹೂಮಾಲೆ ಮಾರುವವರು ಹಾಗೂ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ದಾವಣಗೆರೆ, ಗದಗ ಮುಂತಾದ ಜಿಲ್ಲೆಗಳಿಂದ ಭಕ್ತರು ಜಾತ್ರೆಗೆ ಮಂಗಳವಾರ ಮುಂಜಾನೆಯೇ ಬಂದು ದೇವಸ್ಥಾನದ ವಿಶಾಲ ಜಾಗದಲ್ಲಿ ಬೀಡು ಬಿಟ್ಟಿರುತ್ತಾರೆ.

ದಿನಾಂಕ ೨೩.೧೧.೨೦೨೧ ರ ಮಂಗಳವಾರ ದಿವಸ ಸಾಯಂಕಾಲ ೪ ಘಂಟೆಗೆ ಊರೊಳಗಿಂದ ಭಜನೆ, ಡೊಳ್ಳು, ಬಾಜಾ ಭಜಂತ್ರಿ, ಝಾಂಜ್ ಮೇಳ ಮುಂತಾದ ಜನಪದ ವಾದ್ಯ ವೈಭವಗಳೊಂದಿಗೆ ದೇವಿಯ ಮೆರವಣಿಗೆ ದೇವಸ್ಥಾನದ ಕಡೆಗೆ ಹೊರಡುವುದು. ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ಮೆರವಣಿಗೆಯ ಜೊತೆ ದೇವಿಯ ಸನ್ನಿಧಾನವನ್ನು ತಲುಪಿ ಹೂವಿನ ಹಾರಗಳನ್ನು ಹಾಕಿ, ಎಲೆ ಸೇವೆ (ವೀಳ್ಯೆದೆಲೆ) ಮಾಡಿ ಸಿಹಿ ಪದಾರ್ಥದ ಎಡೆಯನ್ನು ಅರ್ಪಿಸುತ್ತಾರೆ.
ದೇವಿಗೆ ಎಲೆ ಸೇವೆ

ರಾತ್ರಿ ೮ ಘಂಟೆಯಿಂದ ಅಹೋ ರಾತ್ರಿ ದೇವಸ್ಥಾನದ ಆವರಣದಲ್ಲಿಯೇ ಎಲ್ಲರೂ ಬಿಡಾರ ಹೂಡಿದ್ದು, ಜಾತ್ರೆಯ ವಿಶೇಷ ಅಡಿಗೆ ತಯಾರಿಸುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಡೊಳ್ಳಿನ ಕೈಪೆಟ್ಟು, ಡೊಳ್ಳಿನ ಪದ, ಗೀಗೀ ಪದ, ಲಾವಣಿ ಪದ, ಭಜನಾ ಪದ, ಹೆಜ್ಜೆಕುಣಿತ ಮುಂತಾದ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗುತ್ತವೆ.

ಬುಧವಾರ ಪ್ರಾತಃಕಾಲ ೨ಘಂಟೆಗೆ ಪೂಜಾರಿಕೆಯವರ ಮನೆಯಿಂದ ತಂದ ದೇವಿಯ ಉತ್ಸವಮೂರ್ತಿಯನ್ನು ಹಾಗೂ ಮಾರಿಕಾಂಬೆಯ ಉತ್ಸವ ಮೂರ್ತಿಯನ್ನೂ ಬಸವಣ್ಣದೇವರ ದೇವಸ್ಥಾನದ ಪಲ್ಲಕ್ಕಿಯಲ್ಲಿಟ್ಟು, ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಓಣಿ ಓಣಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಭಕ್ತರು ದೀರ್ಘದಂಡ ನಮಸ್ಕಾರ, ಉರುಳು ಸೇವೆ ಮಾಡಿ ಹರಕೆ ತೀರಿಸುತ್ತಾರೆ. ಹೂಬಾಣ, ಸಿಡಿಮದ್ದುಗಳನ್ನು ಹಾರಿಸಿ ಜನರು ಸಂಭ್ರಮಿಸುತ್ತಾರೆ. ಬೆಳಗಿನ ೫ರ ಜಾವದಲ್ಲಿ ದೇವಸ್ಥಾನ ತಲುಪಿದ ನಂತರ ಪಲ್ಲಕ್ಕಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿಟ್ಟು ಪೂಜಿಸಲಾಗುತ್ತದೆ. ತಯಾರಿಸಿದ ವಿಶೇಷ ಅಡುಗೆಯನ್ನು ಎಲ್ಲರೂ ಎಡೆ ಮಾಡಿತಂದು ದೇವಿಗೆ ಅರ್ಪಿಸುತ್ತಾರೆ.

ಸೂರ್ಯೋದಯಕ್ಕೆ ಮುಂಚೆಯೇ ಎಡೆಯನ್ನು ಒಟ್ಟುಗೂಡಿಸಿ ದೇವಸ್ಥಾನದ ಮೇರೆಯವರೆಗೂ ಚೆರಗಚೆಲ್ಲುತ್ತಾರೆ. ಈ ಸಮಯದಲ್ಲಿ ಪೂಜಾರಿಯ ಮೈಮೇಲೆ ದೇವಿಯು ಬಂದು ಹೇಳಿಕೆ ಹೇಳುವ ಮೂಲಕ ಭಕ್ತರ ಬೇಡಿಕೆಗಳನ್ನು ಇಡೇರಿಸುತ್ತಾಳೆಂಬ ನಂಬಿಕೆ ಬಲವಾಗಿದೆ.

ದಿನಾಂಕ ೨೪.೧೧.೨೦೨೧ ರ ಬುಧವಾರ ದಿವಸ ಮುಂಜಾನೆ ದೇವಸ್ಥಾನದ ಆವರಣದಲ್ಲಿ ನೆರೆದಿರುವ ಎಲ್ಲ ಭಕ್ತಾದಿಗಳಿಗೆ ಅನ್ನ ಪ್ರಸಾದವಿರುತ್ತದೆ. ನಂತರ ದೇವಿಯ ಸನ್ನಿಧಾನದಿಂದ ವಾದ್ಯ ವೈಭವಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಊರೊಳಗೆಲ್ಲ ಮೆರವಣಿಗೆ ಮಾಡುವುದರೊಂದಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ.

                                                                                                                                                  -ಡಾ.ರಾಜಶೇಖರ ಚಂ.ಡೊAಬರಮತ್ತೂರ