ಮಂಗಳವಾರ, ನವೆಂಬರ್ 16, 2021

ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರಾ ಮಹೋತ್ಸವ

ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರಾ ಮಹೋತ್ಸವ

ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಹಲವಾರು ಧರ್ಮಗಳು ತಮ್ಮದೆಯಾದ ನಂಬಿಕೆ, ಸಂಪ್ರದಾಯ, ಆಚರಣೆ, ಜಾತ್ರೆ, ಉತ್ಸವಗಳನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿವೆ. ಇವುಗಳು ಜನಪದರ ಸಾಂಸ್ಕೃತಿಕ ಪರಂಪರೆಗೆ ಪ್ರಮುಖ ಆಧಾರಸ್ತಂಭಗಳಾಗಿರುವುದರಿಂದ ಗ್ರಾಮೀಣ ಬದುಕಿನ ಜೀವಂತ ನಾಡಿಮಿಡಿತಗಳಾಗಿದ್ದು, ಬಹುಮುಖಿ ಸಾಂಸ್ಕೃತಿಕ ಜೀವನಕ್ಕೆ ಕನ್ನಡಿಯಾಗಿವೆ. ಒಂದೊಂದು ಗ್ರಾಮದಲ್ಲಿ ನಡೆಯುವ ಒಂದೊಂದು ಜಾತ್ರೆಗಳು ಸಾಮಾಜಿಕ, ಧಾರ್ಮಿಕ ಹಾಗೂ ಕಲಾತ್ಮಕ ಬದುಕಿನಂಥ ಹಲವಾರು ದೃಷ್ಟಿಯಿಂದ ಹಳ್ಳಿಗರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಇಂತಹ ಒಂದು ಜಾತ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಈಚಲಯಲ್ಲಾಪುರ ಗ್ರಾಮದಲ್ಲಿ ಇದೇ ದಿನಾಂಕ ೨೩.೧೧.೨೦೨೧ರ ಮಂಗಳವಾರ ದಿವಸ ಬಹು ವಿಜೃಂಭಣೆಯಿಂದ ಜರುಗುತ್ತಲಿದೆ. ತನ್ನಿಮಿತ್ಯ ಈ ಲೇಖನ.

ಜಿಲ್ಲಾ ಕೇಂದ್ರದಿಂದ ಈಶಾನ್ಯಕ್ಕೆ ೨೨ ಕಿ.ಮೀ. ದೂರ ಹಾಗೂ ತಾಲೂಕು ಕೇಂದ್ರದಿAದ ಪೂರ್ವಕ್ಕೆ ೧೬ ಕಿ.ಮೀ ದೂರದಲ್ಲಿರುವ ಈಚಲಯಲ್ಲಾಪುರ ಗ್ರಾಮವು ತನ್ನದೇ ಆದ ಪ್ರಕೃತಿ ವೈಶಿಷ್ಟವನ್ನು ಹೊಂದಿದ್ದು ಮಲೆನಾಡಿನಂತೆ ಭಾಸವಾಗುತ್ತದೆ.  ಮನೆಗಳೇ ಕಾಣಿಸದಂತಹ ದಟ್ಟ ಹಸಿರು, ಪಕ್ಕದಲ್ಲೇ ಮೈದುಂಬಿ ನಿಂತ ವಿಶಾಲವಾದ ಕೆರೆ ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ.

ಗಿಡ-ಮರಗಳೊಟ್ಟಿಗೆ ವಾಸಿಸುತ್ತ ಅವುಗಳ ಜೊತೆಗಿನ ಭಾವಪೂರ್ಣ ಸಂಬAಧವನ್ನು ಉಳಿಸಿಕೊಂಡು ಬಂದಿರುವ ನಮ್ಮ ಜನಪದರು ಅವುಗಳಲ್ಲೇ ದೈವತ್ವವನ್ನು ಕಂಡುಕೊAಡವರು. ಇವರು ವೃಕ್ಷದೇವತೆಯನ್ನು ಮರೆವ್ವ, ಕರೆವ್ವ,  ಮರದವ್ವ, ದ್ಯಾಮವ್ವ, ದುರಗವ್ವ, ಎಲ್ಲವ್ವ, ಬನಶಂಕರಿ ಎಂದು ಗ್ರಾಮದೇವತೆಯೊಡನೆ ಅಭೇದ ಕಲ್ಪಿಸಿ ಪೂಜಿಸುತ್ತಾರೆ. ಗ್ರಾಮದೇವತೆಯ ಒಂದು ಸ್ವರೂಪವೇ ಮರದಮ್ಮ ಆಗಿರುವುದರಿಂದ ಊರಿನ ಈಶಾನ್ಯ ದಿಕ್ಕಿಗೆ ಇರುವ ವಿಶಾಲ ಬಯಲಿನಲ್ಲಿರುವ ಪುಟ್ಟ ನೀರಿನ ಹೊಂಡ, ಪಕ್ಕದಲ್ಲಿದ್ದ ಬೇವಿನಮರದ (ಮರದ+ಅಮ್ಮ=ಮರದಮ್ಮ) ಅಡಿಯಲ್ಲಿ ಸುಮಾರು ವರ್ಷಗಳಿಂದ ಪೂಜಿಸಿಕೊಂಡು ಬಂದಿರುವ ದೇವತೆಯೇ ‘ಶ್ರೀ ಮರದಮ್ಮ’. ಈ ದೇವತೆಯು ಬೇಡಿ ಬಂದ ಭಕ್ತರಿಗೆ ವರ ನೀಡುವ ವರದಾಯಿನಿ, ಸಂತಾನ ಫಲ ಕರುಣಿಸುವ ಮಾತೃ ಹೃದಯಿ, ಸಕಲ ಸಂಪತ್ತನ್ನು ದಯಪಾಲಿಸುವ ಕರುಣಾಮಯಿಯಾಗಿ ಭಕ್ತ ಸಂಕುಲವನ್ನು ಸಲಹುತ್ತಿದ್ದಾಳೆ.        
                                                                                                                         
 ಗ್ರಾಮದೇವತೆ ಶ್ರೀ ಮರದಮ್ಮದೇವಿ
    
ಈ ಗ್ರಾಮದಲ್ಲಿ ಹಲವಾರು ಜಾತಿ-ಜನಾಂಗದ ಬಾಂಧವರು ಭಾವೈಕ್ಯತೆಯಿಂದ ಬಾಳುತ್ತಿದ್ದು, ಪರಿಶ್ರಮ, ಶ್ರದ್ಧೆ, ತ್ಯಾಗ, ತಾಳ್ಮೆ, ಅನುಕಂಪ, ಸದಾಚಾರಗಳಿಂದ ಶಾಂತಿ ಪ್ರಿಯರೂ, ಧರ್ಮ ಸಹಿಷ್ಣುಗಳೂ ಆಗಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯುಳ್ಳವರು ಆಗಿರುವುದರಿಂದ ಹಿಂದಿನಿAದಲೂ ಇಲ್ಲಿ ದಾನ, ಧರ್ಮ, ಹಬ್ಬ, ಜಾತ್ರೆ, ಆಚರಣೆಗಳು, ಉತ್ಸವಗಳು ಜರುಗುತ್ತಲೇ ಇರುತ್ತವೆ. ಜಾತ್ರೆ ನಡೆಯುವ ದಿನವನ್ನೂ ಊರಿನ ಜನತೆಯೇ ನಿರ್ಧರಿಸುತ್ತಿದ್ದು, ಕಾರ್ತಿಕ ಮಾಸದಲ್ಲಿ ಬರುವ ‘ಗೌರಿ ಹುಣ್ಣಿಮೆ’ಯ ನಂತರದ ಮಂಗಳವಾರವನ್ನು ಜಾತ್ರೆಯ ದಿನವೆಂದು ನಿಶ್ಚಯಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ೨೩.೧೧.೨೦೨೧ ರ ಮಂಗಳವಾರ ದಿವಸ ಗ್ರಾಮದೇವತೆ ಶ್ರೀ ಮರದಮ್ಮದೇವಿಯ ಜಾತ್ರೆಯು ವಿಜೃಂಭಣೆಯಿAದ ನಡೆಯಲಿದೆ.

ತೊಟ್ಟಿಲು ಜೀಕುಗಳು, ದಿನಸಿ ಅಂಗಡಿಗಳು, ಚಹಾದಂಗಡಿಗಳು, ಮಕ್ಕಳಾಟಿಕೆ ವಸ್ತುಗಳ ಮಾರಾಟಗಾರರು, ಮಣಿಗಾರರು, ಹಣ್ಣು-ಕಾಯಿ, ಹೂಮಾಲೆ ಮಾರುವವರು ಹಾಗೂ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ದಾವಣಗೆರೆ, ಗದಗ ಮುಂತಾದ ಜಿಲ್ಲೆಗಳಿಂದ ಭಕ್ತರು ಜಾತ್ರೆಗೆ ಮಂಗಳವಾರ ಮುಂಜಾನೆಯೇ ಬಂದು ದೇವಸ್ಥಾನದ ವಿಶಾಲ ಜಾಗದಲ್ಲಿ ಬೀಡು ಬಿಟ್ಟಿರುತ್ತಾರೆ.

ದಿನಾಂಕ ೨೩.೧೧.೨೦೨೧ ರ ಮಂಗಳವಾರ ದಿವಸ ಸಾಯಂಕಾಲ ೪ ಘಂಟೆಗೆ ಊರೊಳಗಿಂದ ಭಜನೆ, ಡೊಳ್ಳು, ಬಾಜಾ ಭಜಂತ್ರಿ, ಝಾಂಜ್ ಮೇಳ ಮುಂತಾದ ಜನಪದ ವಾದ್ಯ ವೈಭವಗಳೊಂದಿಗೆ ದೇವಿಯ ಮೆರವಣಿಗೆ ದೇವಸ್ಥಾನದ ಕಡೆಗೆ ಹೊರಡುವುದು. ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ಮೆರವಣಿಗೆಯ ಜೊತೆ ದೇವಿಯ ಸನ್ನಿಧಾನವನ್ನು ತಲುಪಿ ಹೂವಿನ ಹಾರಗಳನ್ನು ಹಾಕಿ, ಎಲೆ ಸೇವೆ (ವೀಳ್ಯೆದೆಲೆ) ಮಾಡಿ ಸಿಹಿ ಪದಾರ್ಥದ ಎಡೆಯನ್ನು ಅರ್ಪಿಸುತ್ತಾರೆ.
ದೇವಿಗೆ ಎಲೆ ಸೇವೆ

ರಾತ್ರಿ ೮ ಘಂಟೆಯಿಂದ ಅಹೋ ರಾತ್ರಿ ದೇವಸ್ಥಾನದ ಆವರಣದಲ್ಲಿಯೇ ಎಲ್ಲರೂ ಬಿಡಾರ ಹೂಡಿದ್ದು, ಜಾತ್ರೆಯ ವಿಶೇಷ ಅಡಿಗೆ ತಯಾರಿಸುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಡೊಳ್ಳಿನ ಕೈಪೆಟ್ಟು, ಡೊಳ್ಳಿನ ಪದ, ಗೀಗೀ ಪದ, ಲಾವಣಿ ಪದ, ಭಜನಾ ಪದ, ಹೆಜ್ಜೆಕುಣಿತ ಮುಂತಾದ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗುತ್ತವೆ.

ಬುಧವಾರ ಪ್ರಾತಃಕಾಲ ೨ಘಂಟೆಗೆ ಪೂಜಾರಿಕೆಯವರ ಮನೆಯಿಂದ ತಂದ ದೇವಿಯ ಉತ್ಸವಮೂರ್ತಿಯನ್ನು ಹಾಗೂ ಮಾರಿಕಾಂಬೆಯ ಉತ್ಸವ ಮೂರ್ತಿಯನ್ನೂ ಬಸವಣ್ಣದೇವರ ದೇವಸ್ಥಾನದ ಪಲ್ಲಕ್ಕಿಯಲ್ಲಿಟ್ಟು, ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಓಣಿ ಓಣಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಭಕ್ತರು ದೀರ್ಘದಂಡ ನಮಸ್ಕಾರ, ಉರುಳು ಸೇವೆ ಮಾಡಿ ಹರಕೆ ತೀರಿಸುತ್ತಾರೆ. ಹೂಬಾಣ, ಸಿಡಿಮದ್ದುಗಳನ್ನು ಹಾರಿಸಿ ಜನರು ಸಂಭ್ರಮಿಸುತ್ತಾರೆ. ಬೆಳಗಿನ ೫ರ ಜಾವದಲ್ಲಿ ದೇವಸ್ಥಾನ ತಲುಪಿದ ನಂತರ ಪಲ್ಲಕ್ಕಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿಟ್ಟು ಪೂಜಿಸಲಾಗುತ್ತದೆ. ತಯಾರಿಸಿದ ವಿಶೇಷ ಅಡುಗೆಯನ್ನು ಎಲ್ಲರೂ ಎಡೆ ಮಾಡಿತಂದು ದೇವಿಗೆ ಅರ್ಪಿಸುತ್ತಾರೆ.

ಸೂರ್ಯೋದಯಕ್ಕೆ ಮುಂಚೆಯೇ ಎಡೆಯನ್ನು ಒಟ್ಟುಗೂಡಿಸಿ ದೇವಸ್ಥಾನದ ಮೇರೆಯವರೆಗೂ ಚೆರಗಚೆಲ್ಲುತ್ತಾರೆ. ಈ ಸಮಯದಲ್ಲಿ ಪೂಜಾರಿಯ ಮೈಮೇಲೆ ದೇವಿಯು ಬಂದು ಹೇಳಿಕೆ ಹೇಳುವ ಮೂಲಕ ಭಕ್ತರ ಬೇಡಿಕೆಗಳನ್ನು ಇಡೇರಿಸುತ್ತಾಳೆಂಬ ನಂಬಿಕೆ ಬಲವಾಗಿದೆ.

ದಿನಾಂಕ ೨೪.೧೧.೨೦೨೧ ರ ಬುಧವಾರ ದಿವಸ ಮುಂಜಾನೆ ದೇವಸ್ಥಾನದ ಆವರಣದಲ್ಲಿ ನೆರೆದಿರುವ ಎಲ್ಲ ಭಕ್ತಾದಿಗಳಿಗೆ ಅನ್ನ ಪ್ರಸಾದವಿರುತ್ತದೆ. ನಂತರ ದೇವಿಯ ಸನ್ನಿಧಾನದಿಂದ ವಾದ್ಯ ವೈಭವಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಊರೊಳಗೆಲ್ಲ ಮೆರವಣಿಗೆ ಮಾಡುವುದರೊಂದಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ.

                                                                                                                                                  -ಡಾ.ರಾಜಶೇಖರ ಚಂ.ಡೊAಬರಮತ್ತೂರ

ಗುರುವಾರ, ಜನವರಿ 28, 2021

ರಾಷ್ಟ್ರೀಯ ವಿಚಾರ ಸಂಕಿರಣ-೨೦೨೧ : ಪರಂಪರೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ

 

ಭಾರತದ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು: ಯಶವಂತ ಸರದೇಶಪಾಂಡೆ

(ದಿನಾಂಕ:೨೮ನೇ ಜನವರಿ ೨೦೨೧)

ಭಾರತವು ಕಲೆಯಲ್ಲಿ ವೈವಿಧ್ಯತೆಯನ್ನು ಹೊಂದಿದ್ದು ಅದನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕು. ಬದಲಾದ ಸಂದರ್ಭದಲ್ಲಿ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ನಮ್ಮ ಪರಂಪರಾಗತ ಕಲೆಗಳನ್ನು ಕಟ್ಟುವ ಕ್ರಿಯೆ ಯುವಕರಿಂದಾಗಬೇಕೆಂದು ಎಚ್ಚರಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಹಾಗೂ ಸಂಶೋಧನೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿ  ಉದ್ಘಾಟನಾ ಮಾತುಗಳನ್ನಾಡಿದ ಯಶವಂತ ಸರದೇಶಪಾಂಡೆ ಅವರು ಮಾತನಾಡುತ್ತಾ  ನಮ್ಮ ಪರಂಪರಾಗತ ಕುಲಕಸುಬುಗಳಲ್ಲಿಯ ಜ್ಞಾನ ಮತ್ತು   ವೈಜ್ಞಾನಿಕತೆಯನ್ನು ತಿಳಿಸಿ; ಇಂಥಹವುಗಳನ್ನು ಉಳಿಸಿ ಬೆಳಿಸುವ ಕಾರ್ಯ ವಿಶ್ವವಿದ್ಯಾಲಯದಿಂದ ಅಗಬೇಕೆಂದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು  ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಅಕ್ಷರ ಜ್ಞಾನವೇ ಶ್ರೇಷ್ಠ ಎಂದು ತಿಳಿದಿದ್ದೇವೆ. ಆದರೆ ಅಕ್ಷರಸ್ಥರಕ್ಕಿಂತ ಅನಕ್ಷರಸ್ಥರ ಜ್ಞಾನ ಶ್ರೇಷ್ಠವಾದದ್ದು. ಅನಕ್ಷರಸ್ಥರ ಜ್ಞಾನಕ್ಕೆ ಗೌರವ ಕೊಡುವ ಪರಂಪರೆ ಬರಬೇಕು. ಒಂದು ಅವಕಾಶ ಸರಕಾರ ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿದೆ  ಎಂದು ಪ್ರಶಂಸಿಸಿದರು. ಜನಪದ ಕಲಾವಿದರಾದ ಶರೀಫ್ ಮಾಕಪ್ಪನವರ ಮತ್ತು ಅವರ ತಂಡ ಹಾಡಿದ ನಾಡಗೀತೆಯೊಂದಿಗೆ ಆರಂಭಾದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸುನಂದಾ ಕಳಕನ್ನವರ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿ ಕಾರ್ಯಕ್ರಮವನ್ನು ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಹಮ್ಮಿಕೊಂಡ ಉದ್ದೇಶ ಮತ್ತ ಪರಂಪರೆಯ ಮಹತ್ವವನ್ನು ತಿಳಿಸಿದರುನಂತರ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಶ್ರೀನಿವಾಸ ಬಳ್ಳಿ ಮತ್ತು ಶ್ರೀ ಹರ್ಷವರ್ಧನ ಶೀಲವಂತ ಅವರಿಂದ   ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸಗಳು ನಡೆದವು.ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಎಲ್ಲರನ್ನು ಸ್ವಾಗತಿಸಿದರೆ,ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ  ಗೇಟಿಯವರು ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಧನಾತ್ಮಕ ಚಿಂತನೆ ಪ್ರಗತಿಗೆ ದಾರಿ: ರಘುನಂದನ

ಸಿಕ್ಕಂತ ಅವಕಾಶವನ್ನು  ಸರಿಯಾಗಿ ಬಳಸಿಕೊಂಡು ಅದರ ಮೂಲಕ ಪರಿಚಯವಾಗುವುದೇ ವ್ಯಕ್ತಿ ಪ್ರಗತಿ, ಅದುವೇ ಕ್ರೀಯಾತ್ಮಕತೆಯ ಚಟುವಟಿಕೆ. ನಿಟ್ಟಿನಲ್ಲಿ ದೇಶ ಭಕ್ತಿ ನಿರ್ಮಿತವಾಗಬೇಕು, ಒಂದು ಕ್ರಿಯೆ ನಮ್ಮ ಜನಪದರಲ್ಲಿದೆ. ಅವರು ಕ್ರಿಯಾತ್ಮಕ  ಬಗೆ ನೆಲ ಮೂಲವಾಗಿದ್ದು ತನ್ನ ಸುತ್ತಲದ ಪರಿಸರದಲ್ಲಿನ ವಸ್ತುಗಳನ್ನೇ ತನ್ನ ಪ್ರಗತಿಗೆ ಬಳಸಿಕೊಳ್ಳಾತ್ತಾರೆ. ಮೂಲಕ ಅವರು ತಮ್ಮತನವನ್ನು ಪ್ರತಿನಿಧಿಸುತ್ತಾರೆ ಇದು ರಾಷ್ಟ್ರೀಯತೆ ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಹಾಗೂ ಸಂಶೋಧನೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಘುನಂದನ ಅವರು ಸಮಾರೋಪ ಮಾತುಗಳನ್ನಾಡುತ್ತಾ  ಈಗ ಬದಲಾದ ಸಂದರ್ಭದಲ್ಲಿ ಪರಂಪರಾಗತ ಜ್ಞಾನವನ್ನು ಹೇಗೆ ಬಳಸಿಕೊಳ್ಳುಬೇಕು ಎಂಬುದನ್ನೂ  ಶೋಧಿಸಿ ಕ್ರೀಯಾತ್ಮಕಗೊಳಿಸಿಕೊಳ್ಳಬೇಕು ಮೂಲಕ ನವಭಾರತ ಕಟ್ಟಬೇಕೆಂದರು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎನ್.ಎಮ್.ಸಾಲಿ ಅವರು ಮಾತನಾಡುತ್ತಾ ಜನಪದರ ಜ್ಞಾನ ಎನ್ನುವಂತಹದು ವಿಶಾಲವಾದದ್ದು ಇದರ ಜ್ಞಾನ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ರಾಷ್ಟ್ರ ಪ್ರಜ್ಞೆಯನ್ನು ಹೊಂದಿದಂತೆಯೇ ಎಂದರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು  ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ನಮ್ಮ ಜನಪದರ ಅನುಭವ ಜ್ಞಾನವೇ ಒಂದು ಶಿಕ್ಷಣ. ದೇಶಿ ಶಿಕ್ಷಣಕ್ಕೆ ನಾವು ತೆರೆದುಕೊಳ್ಳಬೇಕೆಂದರು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸುನಂದಾ ಕಳಕನ್ನವರ ಅವರು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಉತ್ತಮ ಅವರು ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನು ಸ್ವಾಗತಿಸಿದರು. ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಎಲ್ಲರಿಗೂ  ವಂದಿಸಿದರು. ಡಾ.ವಿಜಯಲಕ್ಷ್ಮೀ  ಗೇಟಿಯವರು ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

                                                                                                                                                                                    ವರದಿ: ಡಾ.ನದಾಫ್ ಹೆಚ್.ಹೆಚ್ ಹತ್ತಿಮತ್ತೂರ

ಹಕ್ಕು ಮತ್ತು ಕರ್ತವ್ಯಗಳ ಪರಿಜ್ಞಾನವೇ ಪ್ರಜಾಗಣತಂತ್ರದ ಉದ್ದೇಶ: ಪ್ರೊ.ಡಿ.ಬಿ.ನಾಯಕ

       

  "ನಮ್ಮ ದೇಶಕ್ಕೆ  ಹಿರಿಯರ ಶ್ರಮದಿಂದ ಸ್ವಾತಂತ್ರ್ಯ ಸಿಕ್ಕು ಉತ್ತಮ ಸಂವಿಧಾನ ಸಂದಿದೆ. ಇಂಥಹ  ಸಂವಿಧಾನದ  ಸತ್ವವನ್ನು ಅರ್ಥೈಸಿಕೊಂಡು ನಡೆಯುವಲ್ಲಿ ನಾವು ಸೋತಿದ್ದೇವೆ. ಕೇವಲ ಹಕ್ಕಿಗಾಗಿಯೇ ಹೊರಾಡುತ್ತೇವೆ ಹೊರತು ಕರ್ತವ್ಯಗಳ ಅರಿವನ್ನೆ ಮರೆತಿದ್ದೇವೆ. ಜಪಾನಿನಂತಹ ಸಣ್ಣ ಸಣ್ಣ ರಾಷ್ಟ್ರದ ಜನರು ತಮ್ಮ ಕರ್ತವ್ಯದ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಮುನ್ನೆಡಿಸಿದ್ದನ್ನು ಕಾಣುತ್ತವೆ. ಯಾವುದೇ ತರಹದ ಮುಷ್ಕರ ಮಾಡಬೇಕಾದರೆ ದಿನ ಅವರು ಕೈಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ದಿನದಕ್ಕಿಂತ ಹೆಚ್ಚಿಗೆ ಕೆಲಸ ಮಾಡುವುದನ್ನು ಕಾಣುತ್ತವೆ. ನಮ್ಮಲ್ಲಿ ರಾಷ್ಟ್ರದ ಸಂಪತ್ತನ್ನು ಹಾಳು ಮಾಡುವುದೇ ಮುಷ್ಕರ ಎನ್ನುವಂತಾಗಿದೆ. ಹಿನ್ನೆಲೆಯಲ್ಲಿ ಆಲೋಚಿಸಿದಾಗ ದೇಶ ಕಟ್ಟಲು ನಿಜವಾದ ಕರ್ತವ್ಯಗಳನ್ನೆ ಮರೆತಿರುವುದು ಭಾರತೀಯ ಪ್ರಜೆಗಳ ಮನೋಸ್ಥಿತಿಯಾಗಿದೆಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ.ನಾಯಕ ಅವರು ಹೇಳಿದರು

             

                                                       72ನೇ ಗಣರಾಜ್ಯೋತ್ಸವವನ್ನು ಮಾನ್ಯ ಕುಲಪತಿಗಳು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ೭೨ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಾ  ಜಗತ್ತಿನಲ್ಲಿಯೇ ನಮ್ಮ ಸಂವಿಧಾನ ವಿಶಿಷ್ಟವಾಗಿದ್ದು ಸರ್ವಜಾತಿ, ಸಮುದಾಯ, ಧರ್ಮಗಳ ಬದುಕಿಗೆ ದಾರಿದೀಪವಾಗಿದೆ. ಸರ್ವೋದಯ ಸಮತಾ ಸಮಾಜಕಟ್ಟಲು  ಬುನಾದಿಯಾದ ಸಂವಿಧಾನವನ್ನು ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧಿಕ ಶ್ರಮವಿದೆ ಎಂಬುದನ್ನು ನಾವು ಯಾರೂ ಮರೆಯಬಾರದೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಎನ್.ಎಮ್.ಸಾಲಿಯವರು ಮತ್ತು ಸಹಾಯಕ ಕುಲಸಚಿವರಾದ ಶ್ರೀ ಶಹಜಾನ ಮುದಕವಿಯವರು ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಯವರುಗಳು ಉಪಸ್ಥಿತರಿದ್ದರು.

                                                                        ವರದಿ: ಡಾ.ನದಾಫ್ ಹೆಚ್.ಹೆಚ್ ಹತ್ತಿಮತ್ತೂರ